ಸಿದ್ದಾಪುರ: ಸಮಾಜದ ಅಭಿವೃದ್ಧಿಗೆ ಸಂಘಟನೆ ಬಹುಮುಖ್ಯ. ಕಳೆದ ಹಲವು ವರ್ಷಗಳ ಹೋರಾಟದ ಫಲವಾಗಿ ಸಿದ್ದಾಪುರ ಭಾಗದಲ್ಲಿ ಸಂಘಟನೆ ಇಂದು ಗಟ್ಟಿಯಾಗಿ ಇದೀಗ ಸಮುದಾಯ ಭವನ ನಿರ್ಮಾಣ ಹಂತಕ್ಕೆ ತಲುಪಿದ್ದು ಈ ಸುಂದರ ಗಳಿಗೆಯಲ್ಲಿ ಪ್ರತಿಯೊಬ್ಬರು ಸಮಾಜಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಶ್ರೀ ಆದಿಚುಂಚನಗಿರಿ ಮಿರ್ಜಾನ್ ಶಾಖಾ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ನುಡಿದರು.
ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಭಾನುವಾರ ಹಮ್ಮಿಕ್ಕೊಂಡಿದ್ದ ಸಿದ್ದಾಪುರ ತಾಲ್ಲೂಕು ಕರೆ ಒಕ್ಕಲಿಗರ ಸಂಘದ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಉಪಸ್ಥಿತರಿದ್ದು ಆಶೀರ್ವಚನ ನೀಡಿದರು.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಪ್ರಪಂಚದಾದ್ಯಂತ ತನ್ನ ಕಂಪನ್ನು ಹರಡಿದೆ. ಭೈರವೈಕ್ಯ ಪರಮಪೂಜ್ಯ ಬಾಲಗಂಗಾಧರನಾಥ ಸ್ವಾಮೀಜಿ ಅವರು ಈ ಒಂದು ಮಹತ್ ಕಾರ್ಯದಲ್ಲಿ ತೊಡಗಿಸಿಕೊಂಡು ಶಿಕ್ಷಣ, ವೈದ್ಯಕೀಯ, ಸಾಮಾಜಿಕ ಜವಾಬ್ದಾರಿ ಹೀಗೆ ಹತ್ತಾರು ಕ್ಷೇತ್ರದಲ್ಲಿ ಸೇವೆ ಒದಗಿಸಿದರು. ಉತ್ತರಕನ್ನಡ ಜಿಲ್ಲೆಯಲ್ಲಿಯೂ ಶ್ರೀಮಠ ಕಳೆದ 30 ವರ್ಷದಿಂದ ಸಾಮಾಜಿಕ, ಶೈಕ್ಷಣಿಕ ಸೇವೆ ಜೊತಗೆ ಎರಡು ಶಾಖಾ ಮಠದ ಮೂಲಕ ಸಮುದಾಯದ ಅಭಿವೃದ್ಧಿಗೆ ಸಂಪೂರ್ಣ ಕಾರ್ಯನಿರ್ವಹಣೆ ಮಾಡುತ್ತಿದೆ. ಇದೀಗ ಘಟ್ಟದ ಮೇಲ್ಬಾಗದಲ್ಲಿಯೂ ಸಮುದಾಯದವರನ್ನು ಒಗ್ಗೂಡಿಸಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನೆ ಸಜ್ಜಾಗುತ್ತಿರುವುದು ಹೆಮ್ಮೆಯ ಸಂಗತಿ. ಈ ಮೂಲಕ ಇತರೆ ಸಮುದಾಯಗಳಂತೆ ಒಕ್ಕಲಿಗ ಸಮುದಾಯದ ಜನರು ಕೂಡ ಸಂಘಟಿತರಾಗುತ್ತಿದ್ದಾರೆ. ಇದೀಗ ಈ ಸಮುದಾಯದ ಮೂಲಕ ಸಮುದಾಯಕ್ಕೆ ಶಾಶ್ವತ ನೆಲೆ ಸಿಕ್ಕಂತಗಾಲಿದೆ ಎಂದು ಹೇಳಿದರು.
ಇನ್ನು ಸಿದ್ದಾಪುರದ ಹಲಗಡಿಕೊಪ್ಪದಲ್ಲಿ ಏಪ್ರಿಲ್ 11 ರಂದು ನಡೆಯಲಿರುವ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮಕ್ಕೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶಾಖಾ ಮಠದ ಪೂಜ್ಯರು ಹಾಗೂ ಅನೇಕ ಗಣ್ಯರು ಆಗಮಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಪ್ರತಿ ಕುಟುಂಬದವರು ಆಗಮಿಸಬೇಕು. ಜೊತೆಗೆ ಕಾರ್ಯಕ್ರಮದ ಪೂರ್ವ ಸಿದ್ದತೆಗೆ ಅಗತ್ಯವಿರುವ ಎಲ್ಲ ರಿತಿಯ ಸಹಾಯ ಸಹಕಾರ ನೀಡಬೇಕು. ಜವಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಕಾರ್ಯಕ್ರಮದ ಯಶಸ್ಸಿಗೆ ಪಾಲುದಾರರಾಗಬೇಕು ಎಂದು ನುಡಿದರು.
ಸಮಾಜ ಮುಖಂಡರಾಡ ಎಂ.ಟಿ ಗೌಡ ಮಾತನಾಡಿ, ಉತ್ತರಕನ್ನಡ ಜಿಲ್ಲೆಯಲ್ಲಿ ಶ್ರೀಮಠದ ಸಹಕಾರದಿಂದಾಗಿ ಇಂದು ಸಮಾಜ ಇತರ ಸಮುದಾಯಗಳಂತೆ ಮುನ್ನೆಲೆಗೆ ಬಂದು ನಿಂತಿದೆ. ಘಟ್ಟದ ಮೇಲ್ಬಾಗದ ತಾಲ್ಲೂಕುಗಳಲ್ಲಿಯೂ ಉತ್ತಮ ಸಂಘಟನೆಯಾಗಿದ್ದು ಸಮಾಜದ ಅಭಿವೃದ್ಧಿಗೆ ಪ್ರತಿಯೊಬ್ಬರು ತಕ್ಷಣಕ್ಕೆ ಫಲ ಬಯಸದೆ ಕೈ ಜೋಡಿಸಬೇಕು. ಮುಂದೊಂದು ದಿನ ನಮ್ಮ ಮಕ್ಕಳಿಗೆ ನಮ್ಮ ನಾಡಿಗೆ ನಮ್ಮ ಕೊಡುಗೆಗಳು ನೆರವಿಗೆ ಬರಲಿದೆ. ಭವನ ನಿರ್ಮಾಣ ಹಾಗೂ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಜವಬ್ದಾರಿಗಳನ್ನು ಮುಂದೆ ಬಂದು ವಹಿಸಿಕೊಂಡು ಉತ್ತಮ ರಿತಿಯಲ್ಲಿ ನಿರ್ವಹಿಸುವಂತಾಗಬೇಕು ಎಂದರು.
ಇನ್ನು ಇದೇ ಸಂದರ್ಭದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಜಾಗವನ್ನು ನೀಡಿದ ಹಲಗಡಿಕೊಪ್ಪದ ತೃಪ್ತಿನಗರದ ವೆಂಕಟೇಶ ರಾಮದಾಸ್ ಕಾಂತೂ ಅವರನ್ನು ಶ್ರೀಮಠದ ಪರವಾಗಿ ಶ್ರೀ ನಿಶ್ಚಲಾನಂದ ನಾಥ ಸ್ವಾಮೀಜಿ ಗೌರವಿಸಿದರು. ಬಳಿಕ ಮಾತನಾಡಿದ ವೆಂಕಟೇಶ ರಾಮದಾಸ್ ಕಾಂತೂ ಅವರು, ಭಗವಂತ ನಮಗೆ ಕೊಟ್ಟಿರುವುದನ್ನು ಸರಿಯಾದ ರಿತಿಯಲ್ಲಿ ಸದ್ವಿನಿಯೋಗ ಮಾಡಬೇಕು. ದಾನ ಮಾಡುವ ಶಕ್ತಿ ಇರುವಂತವರು ಒಳ್ಳೆಯ ಕೆಲಸಗಳಿಗೆ ಸದಾ ದಾನ ಮಾಡಬೇಕು. ನಮ್ಮಲ್ಲಿರುವ ಸ್ವತ್ತು ಶಾಶ್ವತವಲ್ಲ. ಆದರೆ ಬಡವರಿಗೆ ನಾಲ್ಕು ಜನರಿಗೆ ನಾವು ಮಾಡುವ ಸಹಾಯ ಸಹಕಾರವೇ ಸದಾ ಶಾಶ್ವತವಾಗಿರುತ್ತದೆ ಎಂದು ಹೇಳಿದರು.
ಇನ್ನು ಇದೇ ಸಂದರ್ಭದಲ್ಲಿ ಪ್ರಚಾರ ಸಮಿತಿ, ಆರ್ಥಿಕ, ಉಟೋಪಚಾರ, ವೇದಿಕೆ, ನೀರಾವರಿ,ಪೂರ್ಣಕುಂಭ, ರ್ಯಾಲಿ, ಧಾರ್ಮಿಕ, ಪಾರ್ಕಿಂಗ್ ಹೀಗೆ ಹಲವು ಸಮಿತಿಗಳನ್ನು ರಚಿಸಿ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಯಿತು.
ಪೂರ್ವಭಾವಿ ಸಭೆಯಲ್ಲಿ ಹೊನ್ನಾವರ ತಾಲ್ಲೂಕಾ ಒಕ್ಕಲಿಗರ ಸಂಘದ ಕೃಷ್ಣೆ ಗೌಡ, ಬಾಲಚಂದ್ರ ಗೌಡ, ಉಪನ್ಯಾಸಕ ಉಮೇಶ್ ಭದ್ರಾಪುರ, ಉಮಾಕಾಂತ ಗೌಡ, ಸಿದ್ದಾಪುರ ತಾಲ್ಲೂಕು ಕರೆ ಒಕ್ಕಲಿಗರ ಸಂಘದ ಗೌರವ ಅಧ್ಯಕ್ಷ ಮಹಾಬಲೇಶ್ವರ ಗೌಡ ಸರಕುಳಿ, ಅಧ್ಯಕ್ಷ ಸುಬ್ರಾಯ್ ಗೌಡ, ಉಪಾಧ್ಯಕ್ಷ ಅಮ್ಮು ಗೌಡ, ಸಲಹಾ ಸಮಿತಿ ಸದಸ್ಯ ಶಂಕರ್ ಮಂಜುನಾಥ ಗೌಡ, ಸೀತಾರಾಮ್ ಗೌಡ, ನಾಗಪತಿ ಗೌಡ, ವಿನಾಯಕ ಗೌಡ ಇನ್ನಿತರರು ಇದ್ದರು.